Showing posts with label Mysore. Show all posts
Showing posts with label Mysore. Show all posts

Thursday, 24 May 2012

ಪ್ರವಾಸವೋ-ಪ್ರಯಾಸವೋ

ಒಂದು ಕಡೆ ಹಗರಣಗಳ ಪರ ನಿಂತಿರುವ ರಾಜಕಾರಣಿಗಳು, ಮತ್ತೊಂದೆಡೆ ಅವರ ವಿರುದ್ದ ಹೋರಾಡುತ್ತಿರುವ ನಾಗರಿಕರು, ನಡುವೆ ಏನಾದರೆ ನಮಗೇನು ಎಂದು ಬದುಕುತ್ತಿರುವ ಶ್ರೀಸಾಮಾನ್ಯರು, ಇಂಥಹ ದಯನೀಯ ಸ್ಥಿತಿಯಲ್ಲಿ ಸಿಕ್ಕಿದಷ್ಟು ದೋಚುವ ವ್ಯಾಪಾರಿಗಳು, ಅಧಿಕಾರಿಗಳು, ಗುತ್ತಿಗೆದಾರರುಗಳನ್ನು ನೋಡಿದಾಗ ನಮ್ಮ ಭವಿಷ್ಯದ ಬಗ್ಗೆ ಬಹಳ ಗಾಬರಿ ಮೂಡುವುದು ಸಹಜ. 

ಚಾಮುಂಡಿ ಬೆಟ್ಟ 
ಮೈಸೂರು ಪ್ರಸಿದ್ದ ಪ್ರವಾಸಿ ತಾಣ. ದೋಚುವುದು, ವಂಚಿಸುವುದು, ಮುಂತಾದ ಅಕ್ರಮ ಚಟುವಟಿಕೆಗಳಿಗೆ ಮೈಸೂರಿಗಿಂತ ಪ್ರಶಸ್ತ ಸ್ಥಳ ಮತ್ತೆಲ್ಲಿ ಸಿಕ್ಕೀತು? ಚಾಮುಂಡಿಬೆಟ್ಟ, ಕೃಷ್ಣರಾಜಸಾಗರ, ಶ್ರೀರಂಗಪಟ್ಟಣ ಮುಂತಾದೆಡೆಗೆ ಯಾವಾಗಲೂ ಪ್ರವಾಸಿಗಳ ನೂಕುನುಗ್ಗಲೇ ಸರಿ. ಇಂತಹ ತಾಣಗಳಲ್ಲಿ ಪ್ರವಾಸಿಗರ ಅವಶ್ಯಕತೆಗಳೂ ಬಹಳಷ್ಟಿರುತ್ತವೆ. ಅವುಗಳನ್ನು ಪೂರೈಸಿ ಹಣ ದೋಚುವ ವ್ಯಾಪಾರಿಗಳೂ ಬಹಳಷ್ಟಿದ್ದಾರೆ. ದೋಚುವ ವ್ಯಾಪಾರಿಗಳಿಗೆ ಕಡಿವಾಣ ಹಾಕಬೇಕಾದ ಅಧಿಕಾರಿಗಳು ಕಣ್ಮುಚ್ಚಿ ತೆಪ್ಪಗಿದ್ದಾರೆ.

ಇತ್ತೀಚಿಗೆ, ನನ್ನ ಮೊಮ್ಮಕ್ಕಳೊಂದಿಗೆ ಕೆ.ಆರ್.ಎಸ್- ಚಾಮುಂಡಿ ಬೆಟ್ಟಕ್ಕೆ ಹೋಗುವ ಸಂದರ್ಭ ಬಂದಿತ್ತು. ಖುಷಿಯಿಂದ ನಾವೆಲ್ಲರೂ ಹೊರಟೆವು. ಮೈಸೂರಿನ ರಸ್ತೆಗಳು ಚೆನ್ನಾಗಿರುವುದರಿಂದ ಪ್ರಯಾಣವೇನೋ ಸುಖಕರವಾಗಿತ್ತು. ಬೆಟ್ಟದಮೇಲೆ, ನನ್ನ ಮೊಮ್ಮಗ, ಸಾಫ್ಟ್ ಡ್ರಿಂಕ್ (ಮಾಜ) ಬೇಕೆಂದ. ಅವನೊಂದಿಗೆ ನಾವೆಲ್ಲರೂ ಅದನ್ನು ಖರೀದಿಸಿ ಕುಡಿದೆವು. ಹಣ ಕೊಡುವಾಗ ದೊಡ್ಡ ಶಾಕ್ ನನಗೆ ಕಾದಿತ್ತು. ಪ್ರತಿ ಬಾಟಲ್ ಬೆಲೆ ಎಂ.ಆರ್.ಪಿ ಪ್ರಕಾರ ರೂ 12/- ಇತ್ತು. ಆದರೆ ಅಂಗಡಿಯವನು ರೂ 15/- ಸುಲಿಗೆ ಮಾಡಿದ. ಹೆಚ್ಚು ರೊಕ್ಕ ಏತಕ್ಕಾಗಿ ಎನ್ನುವುದಕ್ಕೆ ಅವನಲ್ಲಿ ಉತ್ತರವಿರಲಿಲ್ಲ. ಬೇರೆ ಪ್ರವಾಸಿಗಳಿಗೆ ಈ ಅನ್ಯಾಯದ ಕಡೆ ಗಮನ ಹರಿಸುವಷ್ಟು ಪುರುಸೊತ್ತು ಇರಲಿಲ್ಲ. ಮಕ್ಕಳು ಕೇಳಿದಾಗ ಇಲ್ಲವೆನ್ನುವ ಸ್ವಭಾವ ಯಾರಲ್ಲೂ ಇರುವುದಿಲ್ಲ. ಅಲ್ಲಿ ಒಂದು ಸೀನ್ ಕ್ರಿಯೇಟ್ ಮಾಡಲು ಇಷ್ಟವಿಲ್ಲದೆ ಅವನು ಕೇಳಿದಷ್ಟು ಹಣ ತೆತ್ತು ಅಲ್ಲಿಂದ ಹೊರಡಬೇಕಾಯಿತು. ಅಲ್ಲಿ ಬೇರೆ ಅಂಗಡಿಗಳಲ್ಲಿ ವಿಚಾರಿಸಿದಾಗ ಎಲ್ಲ ಅಂಗಡಿಗಳಲ್ಲೂ ರೂ 12/- ರ  ಪೇಯ  ರೂ 15/- ಕ್ಕೆ ಮಾರಾಟವಾಗುತ್ತಿರುವ ವಿಷಯ ತಿಳಿಯಿತು.

ಬೃಂದಾವನ, ಕೆ.ಆರ್.ಎಸ್ 
ಮರುದಿನದ ಕೆ.ಆರ್.ಎಸ್ ಭೇಟಿಯೂ ಇಂತಹದೆ ಕಹಿ ಅನುಭವವನ್ನು ನೀಡಿತು. ವಿಚಿತ್ರವೆಂದರೆ, ಇಲ್ಲಿ ಅಂಗಡಿಗಳ ಮೇಲೆಲ್ಲಾ ಕೆ.ಎಸ್.ಟೀ.ಡಿ.ಸೀ ಶಾಪ್ ಎಂಬ ಫಲಕ ಬೇರೆ! ಧರೆಯೇ ಹತ್ತಿ ಉರಿಯುತ್ತಿರುವಾಗ ಓಡುವುದೆಲ್ಲಿಗೆ?

ಈ ಎರಡೂ ಕಡೆ ಬೇರೆ ತಿಂಡಿ-ತಿನಿಸುಗಳೂ ಕೂಡ ಎಂ.ಆರ್.ಪಿಗಿಂತ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿರುವ ವಿಷಯ ನನ್ನ ಗಮನಕ್ಕೆ ಬಂತು. 

ಸರಾಸರಿ ದಿನಕ್ಕೆ 60000 ಜನ ಈ ಸ್ಥಳಗಳಿಗೆ ಭೇಟಿ ಕೊಡುತ್ತಾರೆಂದುಕೊಂಡರೆ  (ವಿಶೇಷ  ದಿನಗಳಲ್ಲಿ ಸಂಖ್ಯೆ 2,00,000 ದಾಟಿದ್ದಿದೆ), ಅವರಲ್ಲಿ 30000 ಜನ ಇಂಥ ಖರೀದಿ ಮಾಡಿದರೆ ಒಂದು ಸಾಮಗ್ರಿಯಿಂದ 90000 ಸುಲಿಗೆ. ಪ್ರವಾಸಿಗಳು ಸಾಮಾನ್ಯವಾಗಿ ಇಂತಾ ಲೆಕ್ಕಾಚಾರ ಹಾಕುತ್ತ ಖರೀದಿಸುವುದನ್ನು ಬಿಡುವುದಿಲ್ಲ. ತಿಂಡಿ-ತಿನಿಸುಗಳ ಖರೀದಿಯೂ ಭರ್ಜರಿಯಾಗೇ ನಡೆಯುತ್ತದೆ. ಹಾಗಾಗಿ ಈ ಯಾವುದೇ ಸ್ಥಳಗಳಲ್ಲೂ ಪ್ರತಿ ದಿನದ ಸುಲಿಗೆ ಕನಿಷ್ಠ ಮೂರರಿಂದ ನಾಲ್ಕು ಲಕ್ಷವೆಂದು ಸುಲಭವಾಗಿ ಲೆಕ್ಕ ಹಾಕಬಹುದು. ಇದು ಅವರ ಲಾಭವನ್ನು ಹೊರತುಪಡಿಸಿ.

ಸಂಬಂಧ ಪಟ್ಟ ಇಲಾಖೆಯ ಉದ್ಯೋಗಿಗಳಾರೂ ಈ ಯಾವುದೇ ಪ್ರವಾಸಕ್ಕೆ ಹೋಗಿಲ್ಲ, ಅಥವಾ ಹೋಗಿದ್ದರೂ ಇಂಥ ವಿಷಯ ಅವರ ಗಮನಕ್ಕೆ ಬಂದಿಲ್ಲ ಎಂದರೆ ನಂಬಲು ಸ್ವಲ್ಪ ಕಷ್ಟವಾಗುತ್ತೆ. ವಾಣಿಜ್ಯ ಇಲಾಖೆ, ತೂಕ ಮತ್ತು ಅಳತೆ ಇಲಾಖೆ, ಪ್ರವಾಸೋದ್ಯಮ ಇಲಾಖೆ ಇಂತಹ ಅನ್ಯಾಯಗಳ ನಿಯಂತ್ರಣ ಮಾಡಬೇಕಾದ ಜವಾಬ್ದಾರಿಯಿಂದ ಹೇಗೆ ನುಣಿಚಿಕೊಂಡಿವೆ? ಈ ಸುಲಿಗೆಯಲ್ಲಿ ಅವರ ಪಾಲೂ ಇಲ್ಲದೆ ಇದು ಸಾಧ್ಯವಿಲ್ಲವೆಂದೆನಿಸುತ್ತೆ.

ಪ್ರವಾಸಿಗರಿಗಾಗಿ ಎಷ್ಟೆಲ್ಲ ಸೌಲಭ್ಯ ಕಲ್ಪಿಸುತ್ತಿರುವ ಸರಕಾರ ಇಂತಹ ಸುಲಿಗೆ ತಪ್ಪಿಸದಿದ್ದರೆ, ಮಾಡಿದ್ದೆಲ್ಲ ವ್ಯರ್ಥ. ಪ್ರವಾಸದ ನೆನಪು ದೀರ್ಘ ಕಾಲ ಮನಸ್ಸಿನಲ್ಲಿ ಉಳಿಯುವಂಥದ್ದು. ಅನುಭವ ಮಧುರ, ಸುಖ, ಉಲ್ಲಾಸಕರವಾಗಿದ್ದರೆ ಮುಂದಿನ ಪ್ರವಾಸದ ತನಕ ಮನಸ್ಸಿನಲ್ಲಿ ಮೆಲುಕು ಹಾಕುತ್ತಿರುತ್ತೇವೆ. ಕಹಿ ಅನುಭವವಾದರೆ ಮತ್ತೆ ಪ್ರವಾಸ ಹೊರಡುವ ಮುನ್ನ ಇನ್ನೊಮ್ಮೆ ಯೋಚಿಸ ಬೇಕೆನಿಸುತ್ತೆ. ಪ್ರವಾಸೋದ್ಯಮ ಯಾವುದೇ ದೇಶದ/ರಾಜ್ಯದ ಆರ್ಥಿಕ ಬೆನ್ನೆಲುಬಾಗುವ ಎಲ್ಲ ಸಾಧ್ಯತೆಗಳನ್ನೂ ಒಳಗೊಂಡಿದೆ. ಪ್ರವಾಸೋದ್ಯಮವೇ ಮುಖ್ಯವಾಗಿರುವ ಯಾವುದೇ ವಿದೇಶದ ಪ್ರವಾಸದಲ್ಲೂ ನಾವು ಪ್ರವಾಸಿಗರನ್ನು ದೇವರಂತೆ ಕಾಣುವ ಸಂಪ್ರದಾಯವನ್ನು ನೋಡಿದ್ದೇವೆ. ಅಲ್ಲಿನ ಸರಕಾರಗಳು ಪ್ರವಾಸಿಗಳ ಅನುಕೂಲಕ್ಕೆ ಯಾವ ಮಟ್ಟಕ್ಕೆ ಹೋಗಲೂ ಸಿದ್ದವಾಗಿರುತ್ತವೆ.

ನಮ್ಮ ದೇಶದಲ್ಲಿ ಶ್ರೀ ಸಾಮಾನ್ಯ ನಾಗರೀಕ ಪ್ರಭುವಿಗೆ ಬೆಲೆ ಬರುವುದು ಯಾವಾಗಲೋ?

Photo courtesy: Google

Wednesday, 19 October 2011

ಮೈಸೂರು ದಸರಾ ಎಷ್ಟೊಂದು ಸುಂದರ!

ದೀಪಗಳಿಂದ ಕಂಗೊಳಿಸುತ್ತಿರುವ ಮೈಸೂರು ಅರಮನೆ
ಬಹುಷಃ ೧೯೬೦ - ೧೯೬೧ ಇರಬೇಕು. ಆಗ ಶ್ರೀ ಜಯಚಾಮರಾಜ ಒಡೆಯರ್ ರವರು ರಾಜ/ರಾಜ್ಯಪಾಲರಾಗಿದ್ದರು. ನಾನು ನಮ್ಮ ತಂದೆಯವರ ಜೊತೆ ಮೈಸೂರು ದಸರಾ ನೋಡಲು ಬಂದಿದ್ದೆ. ನಮ್ಮ ಸೋದರತ್ತೆಯವರ ಮಗನ ಮನೆಯಲ್ಲಿ ನಮ್ಮ ಕ್ಯಾಂಪ್. ಅವರ ಮನೆ ಒಂಟಿಕೊಪ್ಪಲಿನಲ್ಲಿ. ಅವರು ಆಗ ಕಂದಾಯ ಇಲಾಖೆಯಲ್ಲಿ ಕೆಲಸದಲ್ಲಿದ್ದರು. ನಾವು ಬಂದದ್ದು ದುರ್ಗಾಷ್ಟಮಿಯ ದಿವಸ. ಅಂದಿನ ರಾಜ ದರ್ಬಾರ್ ಪ್ರವೇಶಕ್ಕೆ ೨-೩ ಪಾಸ್ ಗಿಟ್ಟಿಸಿಕೊಂಡು ನಮ್ಮ ತಂದೆಯವರೂ ಹಾಗು ನನ್ನ ಸೋದರತ್ತೆಯ ಇಬ್ಬರು ಮಕ್ಕಳೂ ತಯಾರಾದರು. ನಾನು ಅವರ ಮಕ್ಕಳ ಜೊತೆಯಲ್ಲಿ ಅರಮನೆಯ ಮೈದಾನದಲ್ಲಿ ಅರಮನೆಯ ದೀಪಾಲಂಕಾರ ಹಾಗು ಸುತ್ತಲಿನ ವೈಭವಗಳನ್ನು ನೋಡಿ ಕಣ್ಣು ತುಂಬಿಕೊಂಡೆ. ದರ್ಬಾರಿಗೆ ವಿಶೇಷ ವಸ್ತ್ರಗಳನ್ನು ಧರಿಸಿಯೇ ಹೋಗಬೇಕಾಗಿತ್ತು. ಪ್ಯಾಂಟ್ ಮೇಲೆ ಉದ್ದನೆಯ ಕರಿಕೋಟು, ಮೈಸೂರು ಪೇಟ, ಜರತಾರಿ ಶಲ್ಯ ಇವು ವೇಷ ಭೂಷಣ. ಇವೆಲ್ಲ ಬಾಡಿಗೆಗೆ ಸಿಗುತ್ತಿದ್ದವು. ಸಂಜೆ ೭ರಿಂದ ೯ರವರೆಗೆ ನವರಾತ್ರಿಯಲ್ಲಿ ದರ್ಬಾರ್ ನಡೆಯುತ್ತಿತ್ತು. ಮಹಾರಾಜರ ಸಿಂಹಾಸನಾರೋಹಣ ಆದ ತಕ್ಷಣ ದೀಪಗಳೆಲ್ಲ ಜಗ್ಗನೆ ಹೊತ್ತಿಕೊಳ್ಳುತ್ತಿದ್ದವು. ಅವರು ಸಿಂಹಾಸನದಿಂದ ಏಳುತ್ತಿದ್ದಂತೆ ಆರುತ್ತಿದ್ದವು. ಎರಡು ಘಂಟೆ ರಾಜರ ಎದುರಿನಲ್ಲಿ ರಮಣೀಯವಾದ ಸಂಗೀತ, ನೃತ್ಯ, ಕುಸ್ತಿಗಳು ಏರ್ಪಾಡಾಗಿರುತ್ತಿತ್ತು. ರಾಜರನ್ನು ದೇವರಂತೆ ಕಾಣುತ್ತಿದ್ದ ಜನರು, ಅವರಿಗೆ ಬೆನ್ನು ತೋರಿಸದಂತೆ ಓಡಾಡುತ್ತಿದ್ದರು. ರಾಜರಿಗೆ ದರ್ಬಾರಿಗರು ಏನಾದರು ನಜರು ಒಪ್ಪಿಸುತ್ತಿದ್ದರು. ರಾಜರಿಂದಲೂ ಅವರಿಗೆ ಯಥಾ ಮರ್ಯಾದೆ ದೊರೆಯುತ್ತಿತ್ತು. 

ದಸರಾ ಮೆರವಣಿಗೆ
ದರ್ಬಾರ್ ಮುಗಿದ ಮೇಲೆ ಮನೆಗೆ ಹೋಗುವಾಗ ನಮ್ಮ ತಂದೆಯವರು ನನಗೆ ಒಂದು ಜೊತೆ ಶೂಗಳನ್ನು ಕೊಡಿಸಿದರು. ಚಪ್ಪಲಿಯನ್ನೇ ಧರಿಸದ ನನಗೆ ಅತಿ ಸಂಭ್ರಮ. ಮರುದಿನ ಮಹಾನವಮಿ - ಆಯುಧಪೂಜೆ. ಅರಮನೆಯಲ್ಲಿ ಆಯುಧಪೂಜೆ ವೀಕ್ಷಿಸಲು ಬೆಳಗಿನ ೯ರ ಸಮಯಕ್ಕೆ ಬಂದೆವು. ಮಹಾರಾಜರು ಅರಮನೆಯ ಮುಂಬಾಗದಲ್ಲಿ ಪೂಜೆ ನೆರವೇರಿಸುತ್ತಿದ್ದರು. ಪಟ್ಟದ ಆನೆ, ಕುದುರೆ, ಹಸು, ನಂದಿ, ತೋಪುಗಳು, ಪಟ್ಟದ ಕತ್ತಿ, ಕುದುರೆಗಾಡಿಗಳು, ಮುಂತಾದ ರಾಜ ಸೌಕರ್ಯ - ಸವಲತ್ತುಗಳಿಗೆಲ್ಲ ಪೂಜೆ ನೆರವೇರುತ್ತಿತ್ತು. ರಾಜಪೋಷಾಕು ಧರಿಸಿ, ಅವರ ಪುರೋಹಿತ ವೃಂದದಿಂದ ಸುತ್ತುವರಿದ ರಾಜರನ್ನು ನೋಡುವುದೇ ಒಂದು ಸೊಗಸಾದ ಅನುಭವವಾಗಿರುತ್ತಿತ್ತು. ಅದರೊಂದಿಗೆ ವೈಭವದ ಪೂಜೆ, ಮಂತ್ರಘೋಶ, ಸುತ್ತಲಿನ ದೇವಾಲಯಗಳಲ್ಲಿನ ಪೂಜೆಗಳು, ಒಂದು ಬಗೆಯ ವಿಶಿಷ್ಟ ಅನುಭೂತಿಯನ್ನು ಒದಗಿಸುತ್ತಿತ್ತು. ಇವೆಲ್ಲ ಮುಗಿಯುವ ಹೊತ್ತಿಗೆ ಸುಮಾರು ಮದ್ಯಾಹ್ನ ೧೨ರ  ಸಮಯವಾಗುತ್ತಿತ್ತು. ನಾನು ನನ್ನ ಹೊಸ ಶೂ ಧರಿಸಿ ಹೆಮ್ಮೆಯಿಂದ ಓಡಾಡುತ್ತಿದ್ದೆ. ಮನೆಗೆ ಹೋಗುವ ಹೊತ್ತಿಗೆ ಶೂ ಕಚ್ಚಿ ನಡೆದಾಡಲೂ ಆಗಲಿಲ್ಲ! ಸಾಯಂಕಾಲ ದಸರಾ ವಸ್ತು ಪ್ರದರ್ಶನಕ್ಕೆ ಭೇಟಿ. ಶೂ ಕಚ್ಚಿರುವುದಕ್ಕೆ ಔಷಧಿಯೇನು ಇಲ್ಲ. ಶೂ ಹಾಕಿಕೊಂಡೆ ಅಭ್ಯಾಸ ಮಾಡಿಕೊಳ್ಳಬೇಕೆಂದು ನನ್ನನ್ನು ಶೂ ಹಾಕಿಸಿಕೊಂಡೆ ಕರೆದುಕೊಂಡು ಹೋದರು. ನನಗೆ ವಸ್ತು ಪ್ರದರ್ಶನವೂ ಬೇಡ ಏನೂ ಬೇಡ. ಮನೆಗೆ ಹೋಗಿ ಶೂ ಕಳಚಿದರೆ ಸಾಕಾಗಿತ್ತು! ಹಾಗೆ ಕುಂಟಿಕೊಂಡೇ ಸುತ್ತಾಡಿ ಮನೆಗೆ ಹೋಗುವ ಹೊತ್ತಿಗೆ ನನಗೆ ಜ್ವರವೇ ಬಂದಿತ್ತು. ವಸ್ತುಪ್ರದರ್ಶನದಲ್ಲಿ ಅನೇಕ ಸಣ್ಣ-ಪುಟ್ಟ ಗೃಹೋಪಯೋಗಿ ವಸ್ತುಗಳು ಸಿಗುತ್ತಿದ್ದವು. ಅದರಲ್ಲೂ ಹಳ್ಳಿಯಿಂದ ಬಂದವರಿಗೆ ಸಂಭ್ರಮವೋ ಸಂಭ್ರಮ! ಕಂಡದ್ದನ್ನೆಲ್ಲ ಕೊಳ್ಳುತ್ತಿದ್ದೆವು. ನನ್ನ ತಂಗಿಯರಿಗಾಗಿ ಚನ್ನಪಟ್ಟಣದ ಗೊಂಬೆಗಳು, ನನಗೆ ಕೀ ಕೊಟ್ಟು ಓಡಿಸುವ ಕಾರು, ನೀರಿನಲ್ಲಿ ಚಲಿಸುವ ದೋಣಿ ಮುಂತಾದ ಮನಸೂರೆಗೊಳ್ಳುವ  ವಸ್ತುಗಳನ್ನು ಕೊಂಡೆವು.

ಜಂಬೂ ಸವಾರಿ 
ಮರುದಿನ ವಿಜಯದಶಮಿ. ಪ್ರಖ್ಯಾತ ಜಂಬೂ ಸವಾರಿಯ ದಿವಸ. ನಾನಂತೂ ಹಠ ಹಿಡಿದು ಶೂ ರಹಿತನಾಗಿ ಬರಿಗಾಲಲ್ಲಿ ಬಂದಿದ್ದೆ. ಸಯ್ಯಾಜಿರಾವ್ ರಸ್ತೆಯ ಕಿವುಡ-ಮೂಕರ ಶಾಲೆಯ ಬಳಿ ಮಧ್ಯಾಹ್ನ ೧ ಘಂಟೆಯಿಂದ ಕಾದು ಕುಳಿತಿದ್ದೆವು. ಮೆರವಣಿಗೆಯಲ್ಲಿ ಸ್ಕೌಟ್ಸ್-ಗೈಡ್ಸ್, ಅರಮನೆಯ ಪದಾತಿದಳ, ಪೋಲಿಸ್, ಸೈನ್ಯ , ಅರೆಸೈನ್ಯ, ಅರಮನೆಯ ಗಜ ಪಡೆ, ಅಶ್ವ ಪಡೆ, ಆಸ್ಥಾನ ಸಂಗೀತಗಾರರು, ಕೊಲಾಟದವರು, ನಂದಿ ಧ್ವಜ ಕುಣಿತ ಮುಂತಾದ ಅನೇಕ ಕಲಾ ಪ್ರಕಾರಗಳೂ ಭಾಗವಸಿದ್ದವು. ಮೆರವಣಿಗೆ ಬಹಳ ಶಿಸ್ತಿನಿಂದ ಕೂಡಿರುತ್ತಿತ್ತು. ಕಲಾವಿದರು ತಮ್ಮ ಕಲೆಗಳ ಪ್ರದರ್ಶನವನ್ನು ಬಹಳ ಮುತುವರ್ಜಿಯಿಂದ ಮಾಡುತ್ತಿದ್ದರು. ಅಂಬಾರಿ ಆನೆ ನಾವಿರುವಲ್ಲಿಗೆ ಬರುವ ವೇಳೆಗೆ ಸಮಯ ಸರಿ-ಸುಮಾರು ಸಂಜೆ ೫-೫.೩೦. ಅಂಬಾರಿಯಲ್ಲಿ ಶ್ರೀಮನ್ಮಹಾರಾಜರು ಮುಂದುಗಡೆ ಅವರ ಹಿಂದೆ ಅವರ ಸೋದರ ಮಾವಂದಿರು ಕುಳಿತಿದ್ದರು. ಗಜ ಗಾಂಬೀರ್ಯ, ರಾಜ ಗಾಂಬೀರ್ಯ, ರಾಜ ಕಳೆ, ನೋಡಿ ತಿಳಿಯಬೇಕಿದ್ದರೆ ಅದುವೇ ಸರಿಯಾದ ಸಂಧರ್ಭ. ನಯನ ಮನೋಹರವಾದ ದೃಶ್ಯ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಇಂದಿನಂತೆ ಅಂದು ಅತಿಯಾದ ಸರಕಾರೀ ಮಧ್ಯಸ್ಥಿಕೆ ಇರಲಿಲ್ಲ. ಜನಸಾಮಾನ್ಯರ ಸಮರ್ಪಣಾ ಭಾವದಿಂದ ಕಾರ್ಯಕ್ರಮಗಳು ಬಹಳ ಸಮರ್ಪಕವಾಗಿ ನಡೆಯುತ್ತಿದ್ದವು. ನಿಜವಾದ ಅರ್ಥದಲ್ಲಿ ಅದು ನಾಡ ಹಬ್ಬವಾಗಿತ್ತು. ಇಂದಿಗೂ ಮೈಸೂರು ಸುತ್ತ-ಮುತ್ತಲಿನ ಜನಗಳಿಗೆ ರಾಜ ಕುಟುಂಬದ ಬಗ್ಗೆ ಅಷ್ಟೇ ಆದರ, ಪ್ರೀತಿ, ವಿಶ್ವಾಸವಿದೆ. ಅದೇ ಗೌರವ ಇಂದಿಗೂ ರಾಜಕುಟುಂಬಕ್ಕೆ ಸಿಗುತ್ತಿದೆ. ಅಂದಿನ ಜಂಬೂ ಸವಾರಿಯಲ್ಲಿ ಜಾನಪದ ಕಲಾವಿದರ, ಕಲೆಗಳ ಸೊಗಡಿರುತ್ತಿತ್ತು. ಅನೇಕ ಕಲಾ ಪ್ರಕಾರದವರು ಸಂಭ್ರಮದಿಂದ ಪಾಲ್ಗೊಳ್ಳುತ್ತಿದ್ದರು. ನಗರವಾಸಿಗಳಲ್ಲು ದಸರೆಯ ಸಂಭ್ರಮ ಕಾಣುತ್ತಿತ್ತು. ಸಾಮಾನ್ಯವಾಗಿ ಎಲ್ಲರ ಮನೆಗಳಿಗೂ ನೆಂಟರಿಷ್ಟರು ಬರುತ್ತಿದ್ದರು. ನೆಂಟರು ಬಂದರೆ ಸಂತೋಷ, ಸಂಭ್ರಮ ಪಡುತ್ತಿದ್ದರು. ನೋಡಬೇಕಾದ ಸ್ಥಳಗಳಿಗೆ ಅವರನ್ನು ಕರೆದುಕೊಂಡು ಹೋಗಿ ತೋರಿಸುತ್ತಿದ್ದರು. ನಾನು ಆ ಕಾಲದಲ್ಲೇ ನೋಡಿದ ಜಗನ್ಮೋಹನ ಅರಮನೆ, ಚಾಮುಂಡಿ ಬೆಟ್ಟದ ನೆನಪು ಮಾಸದೆ ಉಳಿದಿದೆ. ಜೂ ನಲ್ಲಿ ತಿರುಗಿ ಕಾಲು ನೋವು ಬಂದಿದ್ದನ್ನು ನೆನಸಿಕೊಂಡರೆ ಈಗಲೂ ಕಾಲು ನೋಯಲು ಶುರುವಾಗುತ್ತದೆ!

ಜಂಬೂ-ಸವಾರಿ ಮುಗಿದ ನಾಲ್ಕೈದು ದಿನಗಳಲ್ಲೇ ಬೆಟ್ಟದಲ್ಲಿ ರಥೋತ್ಸವ. ಮಹಾರಾಜರು ರಥದಲ್ಲಿ ಕುಳಿತಿರುವ ದೇವರ ಕಡೆ ಮುಖ ಮಾಡಿ ಹಿಮ್ಮುಖವಾಗಿ ಚಲಿಸುತ್ತಿರುವ ಸೊಬಗನ್ನು ನೋಡಿ ಅನುಭವಿಸಿಯೇ ತಿಳಿಯಬೇಕು. ಈಗ ಅಂದಿಗಿಂತ ಹೆಚ್ಚು ಜನ ಸೇರುತ್ತಾರೆ. ವ್ಯಾಪಾರ - ವಹಿವಾಟು ಬಹಳ ಹೆಚ್ಚಾಗಿದೆ. ಅನುಕೂಲಗಳು ಚೆನ್ನಾಗಿವೆ. ಜನಗಳಲ್ಲು ಹಣ ಕಾಸಿನ ಓಡಾಟ ಚೆನ್ನಾಗಿದೆ. ಆದರು ಅಂದಿನ ಮುಗ್ದತೆ, ಸಂಭ್ರಮದ ಕೊರತೆ ಮಾತ್ರ ಕಾಣುತ್ತದೆ! 

--
ನಂಜುಂಡಸ್ವಾಮಿ

Image Courtesy: Internet/Google image search