Wednesday 12 September 2012

ಬೇಟೆರಾಯರ ಸನ್ನಿಧಿಯಲ್ಲಿ...

ತುಮಕೂರು ಜಿಲ್ಲೆಯ ತುರುವೇಕೆರೆಗೆ ಭೇಟಿ ಕೊಡುವ ಒಂದು ಅವಕಾಶ ಇತ್ತೀಚಿಗೆ ನನಗೆ ಒದಗಿ ಬಂದಿತ್ತು. ಮೈಸೂರಿನಿಂದ ಪಾಂಡವಪುರ, ನಾಗಮಂಗಲ, ಮಾಯಸಂದ್ರ ಮಾರ್ಗ ತುರುವೆಕೆರೆಗೆ ಕಾರಿನಲ್ಲಿ ಕೇವಲ ಎರಡೂವರೆ ತಾಸಿನ ಪ್ರಯಾಣ. ಪಾಂಡವಪುರದ ಸಮೀಪ  6-8 ಕಿ.ಮಿ. ಬಿಟ್ಟರೆ, ಉಳಿದ ಮಾರ್ಗ ಯಾವ ವಿದೇಶಿ ರಸ್ತೆಗೂ ಕಡಿಮೆಯಿಲ್ಲ. ಬಹಳ ಸೊಗಸಾದ ರಸ್ತೆ. ಇಕ್ಕೆಲಗಳಲ್ಲಿ ಪ್ರಾಕೃತಿಕ ಸೊಬಗನ್ನು ಸವಿಯುತ್ತ ದಾರಿ ಸವೆಯುವುದೇ ತಿಳಿಯುವುದಿಲ್ಲ.

ತುರುವೇಕೆರೆ ಒಂದು ಸಣ್ಣ ಪ್ರಾಚೀನ ಪಟ್ಟಣ. ಇಂದಿನ ಜನ ಸಂಖ್ಯೆ ಬಹುಷಃ 20,000 ಮೀರಿರಲಾರದು. ಕೃಷಿ ಮುಖ್ಯ ಕಸುಬು. ಸಣ್ಣ-ಪುಟ್ಟ ವ್ಯಾಪಾರ ವ್ಯವಹಾರ ಇತ್ತೀಚಿನದು. ಕೆರೆಯ ನೀರೇ ಜೀವಾಧಾರ. ಮಳೆ ಕಡಿಮೆ ಬೀಳುವ ಬಯಲು ಪ್ರದೇಶವಾದುದರಿಂದ ಬಾವಿಯಲ್ಲಿ ನೀರಿಗೂ ಬಹಳ ತ್ರಾಸ ಪಡಬೇಕಾದ ಪರಿಸ್ತಿತಿ. ಅನೇಕ ಬಾವಿಗಳು ಬತ್ತಿವೆ. ಹೇಮಾವತಿ ಜಲಾಶಯದಿಂದ ಇಲ್ಲಿನ ಕೆರೆಗೆ ನೀರುಣಿಕೆ ಮಾಡಿದಾಗ ಸ್ವಲ್ಪ ನೆಮ್ಮದಿ.

ಇಂತಹ ಪುರಾತನ ಪಟ್ಟಣದ ವಿಶೇಷ ಇಲ್ಲಿನ ಪ್ರಾಚೀನ ಸುಂದರ ಗುಡಿಗಳು. ಊರಿನ ತುಂಬೆಲ್ಲಾ ಹತ್ತಾರು ಸಣ್ಣ-ಪುಟ್ಟ ಗುಡಿಗಳು, ಐದಾರು ದೇವಾಲಯಗಳು ಅಂದಿನ ಕಲಾ ವೈಭವ ಹಾಗೂ ಸಾಮರಸ್ಯ ಜೀವನ ಶೈಲಿಯನ್ನು ಎತ್ತಿ ಸಾರುತ್ತಿವೆ. ಶೈವ ದೇವಾಲಯದ ಪಕ್ಕದಲ್ಲೇ ವಿಷ್ಣು ದೇವಾಲಯವಿದೆ. ಎರಡನ್ನೂ ಹೊಯ್ಸಳರ ಕಾಲದಲ್ಲಿ ಕಟ್ಟಿರುವುದಕ್ಕೆ ಪುರಾವೆಗಳಿವೆ. ದೇವಾಲಯಗಳ ಮೇಲೆ ಹೊರ ಧಾಳಿಗಳಾಗಿ, ಅನೇಕ ವಿಗ್ರಹಗಳು ವಿರೂಪಗೊಂಡಿವೆ. ಇಂದಿನ ಜೀವನ ಶೈಲಿಯೋ, ಪುರಾತನ ದೇಗುಲಗಳ ಬಗ್ಗೆ ತಾತ್ಸಾರವೋ, ಸರಕಾರದ ನಿರ್ಲಕ್ಷ್ಯವೋ, ಒಟ್ಟಿನಲ್ಲಿ ಯಾವ ದೇಗುಲವನ್ನೂ ಸರಿಯಾಗಿ ಕಾಪಾಡದೆ ಅಂದಿನ ಕುರುಹುಗಳನ್ನು ನಾವೇ ಹಾಳು ಮಾಡುತ್ತಿದ್ದೇವೆನಿಸುತ್ತದೆ. ಶಂಕರೇಶ್ವರ, ಚನ್ನಕೇಶವ ಮುಂತಾದ ಹೊಯ್ಸಳರ ಕಾಲದ ದೇವಾಲಯಗಳಿಗೆ ಬಹುಷಃ ಅರ್ಚಕರೊಬ್ಬರನ್ನು ಬಿಟ್ಟರೆ ಬೇರಾರೂ ಈಗ ಸಾಮಾನ್ಯ ದಿನಗಳಲ್ಲಿ ಭೇಟಿ ಕೊಡುವ ಹಾಗೆ ಗೋಚರಿಸುವುದಿಲ್ಲ. ಸರಿಯಾದ ರಕ್ಷಣೆ ಇಲ್ಲದೆ ಕಟ್ಟಡಗಳು ನಲುಗುತ್ತಿವೆ.

ಪಟ್ಟಣದ ಮುಖ್ಯ ದೇವಾಲಯ ಶ್ರೀ ಬೇಟೆರಾಯ ಸ್ವಾಮಿಯದು. 1242ರಲ್ಲಿ ಪ್ರತಿಷ್ಠಾಪಿತವಾದ ಸುಂದರ ದೇವ ಮೂರ್ತಿ. ದ್ವಾಪರ ಯುಗಾಂತ್ಯದಲ್ಲಿ ಮ್ರುಕಂಡು ಮುನಿ ಹಾಗು ಚಂದ್ರ ಚೂಡ ಮುನಿಗಳು ಈ ಸ್ಥಳದಲ್ಲಿ ತಪಸ್ಸು ಮಾಡುವಾಗ, ರಾಕ್ಷಸರು ಮೃಗ ರೂಪ ಧರಿಸಿಕೊಂಡು ಬಂದು ಇವರನ್ನು ಮತ್ತು ಪ್ರಜೆಗಳನ್ನು ಹಿಂಸಿಸುತ್ತಿರಲು, ತಪಸ್ವಿಗಳು ಮಹಾ ವಿಷ್ಣುವಿನ ಮೊರೆಹೋಗಿ ತಮ್ಮನ್ನು ರಕ್ಷಿಸಲು ಬೇಡಿಕೊಂಡಾಗ ಮಹಾ ವಿಷ್ಣುವು ಬೇಟೆಗಾರನ ರೂಪದಲ್ಲಿ ಬಂದು ಅವರನ್ನು ರಕ್ಷಿಸಲಾಗಿ ಅವರು ಸ್ವಾಮಿಯನ್ನು ಅಲ್ಲೇ ನೆಲಸಿ ತಮ್ಮ ಸೇವೆಗೆ ಅವಕಾಶ ಮಾಡಿಕೊಡಬೇಕೆಂದು ಪ್ರಾರ್ಥಿಸುತ್ತಾರೆ. ಅದಕ್ಕೆ ಮಹಾ ವಿಷ್ಣುವು ಕಲಿಯುಗದಲ್ಲಿ ಅಲ್ಲಿ ಬೇಟೆರಾಯನಾಗಿ ನೆಲಸುವುದಾಗಿಯೂ, ಅದುವರೆವಿಗೂ ಅಲ್ಲಿನ ಪಕ್ಷಿಮಡುವಿನಲ್ಲಿ ಜಲಧಿವಾಸ ಮಾಡುತ್ತಾ ನಿರೀಕ್ಷಿಸುವುದಾಗಿ ಅಭಯ ಕೊಡುತ್ತಾನೆ. ನಂತರ ಕಲಿಯುಗದಲ್ಲಿ ಸ್ಥಳ ವಾಸಿ ಚೌಡಯ್ಯನವರ ಸ್ವಪ್ನದಲ್ಲಿ ಪ್ರೇರಣೆಯಾಗಿ, ಅವರಿಂದ ಸ್ವಾಮಿಯ ವಿಗ್ರಹ ಪಕ್ಷಿಮಡುವಿನಿಂದ ಸ್ಥಳಾಂತರಗೊಂಡು ಈಗಿನ ಸ್ಥಳದಲ್ಲಿ ಪ್ರತಿಸ್ಥಾಪನೆಯಾಯಿತೆಂದು ಸ್ಥಳ ಪುರಾಣ ತಿಳಿಸುತ್ತದೆ. ನಂತರ ದೇವಸ್ಥಾನದ ನಿರ್ಮಾಣ ನಿರಾಯಾಸವಾಗಿ ನಡೆಯಿತು. ಸ್ವಾಮಿಯ ಪ್ರತಿಷ್ಠೆಯಾದ ನಂತರ, ನೈಋತ್ಯ ಮೂಲೆಯಲ್ಲಿ ಮಹಾಲಕ್ಷ್ಮಿಅಮ್ಮನವರ ಪ್ರತಿಷ್ಠೆ ಹಾಗು ದೇವಾಲಯ ನಿರ್ಮಾಣ ನೆರವೇರಿತೆಂದು ತಿಳಿದುಬರುತ್ತೆ. ಕಣ್ಮನ ತಣಿಸುವ ಬಹು ಸುಂದರ ದೇವಮೂರ್ತಿಗಳನ್ನು ಎಷ್ಟು ನೋಡಿದರೂ ಸಾಲದು. ಈಗ ದೇವಸ್ಥಾನ ಸರಕಾರದ ಮುಜರಾಯಿ ಇಲಾಖೆಯ ಉಸ್ತುವಾರಿಯಲ್ಲಿದೆ. ನಿತ್ಯ ಪೂಜಾ ಕಾರ್ಯ, ಉತ್ಸವ, ರಥೋತ್ಸವಗಳು ನಡೆಯುತ್ತವೆ.

12ನೆಯ ಶತಮಾನದ ಗಂಗಾಧರೇಶ್ವರ ದೇವಾಲಯ ಬೇಟೆರಾಯ ಸ್ವಾಮಿ ದೇವಾಲಯದಿಂದ ಕೆಲವೇ ಗಜಗಳ ದೂರದಲ್ಲಿದೆ. ದ್ರಾವಿಡ ಶೈಲಿಯ ಈ ಪುರಾತನ ದೇವಾಲಯದಲ್ಲಿ ಈಶ್ವರ ಲಿಂಗದ ಶಿರದಲ್ಲಿ ಗಂಗೆ ಜಪ ಸರ ಹಿಡಿದು ಜಪ ಮಾಡುತ್ತಿದ್ದಾಳೆ. ಮೇಲಿನ ಪ್ರಭಾವಳಿಯಿಂದ ನೀರು ಉಕ್ಕುತ್ತಿರುವಂತೆ ಕೆತ್ತನೆ ಮಾಡಲಾಗಿದೆ. ಪ್ರಭಾವಳಿಯ ಒಂದು ಬದಿಯಲ್ಲಿ ಸೂರ್ಯ, ಮತ್ತೊಂದು ಬದಿಯಲ್ಲಿ ಚಂದ್ರ ನೆಲೆಸಿದ್ದಾರೆ. ಲಿಂಗದ ನೆತ್ತಿಯ ಮೇಲೆ ಜಟೆಯ ಕೆತ್ತನೆ ಇದೆ. ಲಿಂಗದ ನೊಸಲಿನ ಭಾಗದಲ್ಲಿ 27 ನಕ್ಷತ್ರಗಳನ್ನು ಕೆತ್ತಲಾಗಿದೆ. ಬಹಳ ಅಪರೂಪದ ಲಿಂಗ ನಾನು ಮೊದಲ ಬಾರಿಗೆ ಕಂಡದ್ದು. ದೇವಾಲಯ ಉತ್ತರಾಭಿಮುಖವಾಗಿದೆ. ಲಿಂಗಾಭಿಷೇಕವಾದ ನೀರೆಲ್ಲಾ ಪಶ್ಚಿಮಾಭಿಮುಖವಾಗಿ ಕೆಳಗೆ ಹರಿದು ಬರುತ್ತೆ. ಕಂಚಿನ ಉತ್ಸವ ಮೂರ್ತಿ ಕೂಡ ಬಹಳ ಸುಂದರವಾಗಿದೆ. ಉತ್ಸವ ಮೂರ್ತಿಯ ಬಲ ಪಾದದ ಮೇಲೆ ಒಂದು ಕಣ್ಣಿದೆ. ಇದೂ ಸಹ ನಾನು ಕಂಡ ಬಹಳ ಅಪರೂಪದ ಮೂರ್ತಿ. ದೇವಾಲಯದ ದ್ವಾರದಲ್ಲಿ ಸುಂದರವಾದ 7 ಅಡಿ ಎತ್ತರದ ಬಸವಣ್ಣನನ್ನು (ನಂದಿ) ಕಡೆದು ಕೂರಿಸಲಾಗಿದೆ. ಇದರ ಮೇಲ್ಮೈ ನಮ್ಮ ಮುಖ ಕಾಣುವಷ್ಟು ನುಣುಪಾಗಿದೆ. ದೇವಾಲಯದ ಮತ್ತೊಂದು ಆಕರ್ಷಣೆ ಕಲ್ಲಿನ ದೊಡ್ಡ ಘಂಟೆ. ಇದರ ವ್ಯಾಸ 2 ಅಡಿ. ಘಂಟಾನಾದ ಮಧುರವಾಗಿದೆ. ಇದರ ಅಡಿಯಲ್ಲೇ ಬೇಡರ ಕಣ್ಣಪ್ಪ ಶಿವನಿಗೆ ಕಣ್ಣು ಅರ್ಪಿಸುತ್ತಿರುವ ಕೆತ್ತನೆ ಇದೆ. ದೇವಾಲಯ ದರ್ಶನ ಬಹಳ ಹಿತವಾದ, ಮುದ ನೀಡುತ್ತೆ.

ಮೂಲೆ ಶಂಕರೇಶ್ವರ ದೇವಾಲಯ
ಗಂಗಾಧರೇಶ್ವರ ದೇವಾಲಯದ ಎದುರಲ್ಲಿ ಅನತಿ ದೂರದಲ್ಲಿ ಮೂಲೆ ಶಂಕರೇಶ್ವರ ದೇವಾಲಯವಿದೆ. 12ನೇ ಶತಮಾನದ ಹೊಯ್ಸಳ ಶೈಲಿಯ ಅತಿ ಸುಂದರ ದೇವಾಲಯ. ತೆಂಗಿನ ತೋಟಗಳ ಸುಂದರ ಹಿನ್ನೆಲೆ ಹೊಂದಿರುವ ಅದ್ಭುತ ತಾಣ. ಪುರ್ವಾಭಿಮುಖವಾಗಿರುವ ಗರ್ಭ ಗುಡಿಗೆ, ನವರಂಗದ ಮೂಲಕ ಉತ್ತರಾಭಿಮುಖವಾಗಿ ಪ್ರವೇಶ. ನಕ್ಷತ್ರಾಕಾರದ ವೇದಿಕೆಯ ಮೇಲೆ ನಿರ್ಮಾಣ ಗೊಂಡಿರುವ ಅದ್ಭುತ ಕಲಾಕೃತಿ. ಇಲ್ಲಿನ ಕೆಲವು ಭಗ್ನಗೊಂಡ ವಿಗ್ರಹಗಳನ್ನು ಹಾಗೆಯೇ ರಕ್ಷಿಸಲಾಗಿದೆ. ಶಿವಲಿಂಗವಂತೂ ಅತಿ ಸುಂದರವಾಗಿದೆ. ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆಯವರ ನೆರವಿನಿಂದ ಶಿಥಿಲಗೊಂಡಿದ್ದ ಈ ದೇವಾಲಯವನ್ನು ಪುನರುಜ್ಜೀವನಗೊಳಿಸಲಾಗಿದೆ.

ಚೆನ್ನಕೇಶವ ದೇವಾಲಯ
ಗಂಗಾಧರೇಶ್ವರ ದೇವಾಲಯದ ಪಶ್ಚಿಮಕ್ಕೆ 500 ಅಡಿಗಳ ದೂರದಲ್ಲಿ ಶ್ರೀ ಚನ್ನಕೇಶವ ದೇವಾಲಯವಿದೆ. 12ನೇ ಶತಮಾನದ ಹೊಯ್ಸಳ ಶೈಲಿಯ ಸುಂದರ ದೇವಾಲಯ. ಚನ್ನಕೇಶವ ವಿಗ್ರಹ ಸುಮಾರು 6 ಅಡಿ ಎತ್ತರವಿದ್ದು ಬಹಳ ಸುಂದರವಾಗಿದೆ. ದೇವರು ಎದುರಲ್ಲೇ ನಿಂತ ಅನುಭವವಾಗುತ್ತೆ. ಎಲ್ಲ ಹೊಯ್ಸಳ ನಿರ್ಮಾಣದಂತೆ ಈ ದೇವಾಲಯವೂ ನಕ್ಷತ್ರಾಕಾರದ ವೇದಿಕೆಯ ಮೇಲೆ ಸುಂದರವಾಗಿ ನಿರ್ಮಾಣವಾಗಿದೆ.

ಈ ಮೂರೂ ದೇವಾಲಯಗಳನ್ನು ರಾಜ್ಯ ಪುರಾತತ್ವ ಇಲಾಖೆ ನೋಡಿಕೊಳ್ಳುತ್ತಿದೆ. ಹಾಗೆಂದು ದೇವಾಲಯಗಳ ಮುಂದೆ ಒಂದೊಂದು ನಾಮಪಲಕ ನೇತಾಡುತ್ತಿದೆ. ಪಟ್ಟಣದಲ್ಲಿರುವ ಸುರಭಿ-ಸಂಗಮ ಟ್ರಸ್ಟ್ ನಾಗರಿಕರ ಸಹಕಾರದಿಂದ ಈ ದೇವಾಲಯಗಳಲ್ಲಿ ದೈನಂದಿನ ಪೂಜಾ ಕಾರ್ಯಗಳಿಗೆ ನೆರವಾಗುತ್ತಿದೆ.

ಇದಲ್ಲದೆ, ಪಟ್ಟಣದಲ್ಲಿ, ಹನುಮಂತನ ಗುಡಿ, ಗಣಪತಿ ಗುಡಿ, ವುಡಿಸಲಮ್ಮನ ಗುಡಿ, ಮಾರಿ ಗುಡಿ ಮುಂತಾಗಿ ಅನೇಕ ಗುಡಿಗಳಿವೆ. ಅಲ್ಲಿರುವ ನನ್ನ ತಂಗಿಗೆ ನಾನು ಯಾವಾಗಲೂ ತಮಾಷೆ ಮಾಡುತ್ತಿದ್ದೆ. ನಿಮ್ಮ ಊರಿಗೆ ಪ್ರವೇಶ ಮಾಡುವಾಗ ಕೈ ಮುಗಿದು ಕೊಂಡು ಬಂದರೆ, ಪುನಃ ವಾಪಸು ಬರುವಾಗಲೇ ಬಿಡುಗಡೆ ಎಂದು. ಆ ಊರಿನಲ್ಲಿ ಒಂದು ನಾಣ್ನುಡಿ ಇದೆ. ಅದು ಹೀಗಿದೆ. ಅರಸು ಬೇಟೆರಾಯ, ವೈಭವದ ಗಂಗಪ್ಪ, ಪಾಪಿ ಚೆನ್ನಿಗರಾಯ, ದಿಕ್ಕಿಲ್ಲದ ಮೂಲೆ ಶಂಕರ. ಅಲ್ಲಿನ ದೇವಾಲಯಗಳ ಇಂದಿನ ಸ್ಥಿತಿ ನೋಡಿದರೆ ಈ ಮಾತು ನಿಜವೆನಿಸುತ್ತೆ!

Monday 10 September 2012

ಮೈಸೂರಿನ ಕೆರೆಗಳು

ಮೈಸೂರು ಪಿಂಚಿನಿದಾರರ ಸ್ವರ್ಗ ಎನ್ನುವ ಮಾತಲ್ಲಿ ಉತ್ಪ್ರೇಕ್ಷೆಯೇನಿಲ್ಲ. ಎರಡನೇ ದರ್ಜೆ ನಗರವಾಗಿರುವುದರಿಂದ ನಗರ ವಾಸದ ಎಲ್ಲ ಅನುಕೂಲವೂ ಇಲ್ಲಿದೆ. ಜೊತೆಗೆ ಮಹಾರಾಜರ ದೂರದೃಷ್ಟಿಯ ಫಲವಾಗಿ ಇತರ ನಗರಗಳಿಗಿಂತ ಹೆಚ್ಚಿನ ಅನುಕೂಲವೂ ಇಲ್ಲಿದೆ. ವಿಶಾಲವಾದ ರಸ್ತೆಗಳು, ವ್ಯವಸ್ಥಿತ, ಯೋಜನಾಬದ್ದ ಬಡಾವಣೆಗಳು, ನೀರಿನ ವ್ಯವಸ್ಥೆ, ಒಳ ಚರಂಡಿ ವ್ಯವಸ್ಥೆ, ವಿದ್ಯುತ್, ಕಸ ವಿಲೇವಾರಿ, ಎಲ್ಲವೂ ಸಮರ್ಪಕವಾಗಿದ್ದು, ಹಿತಕರ ಜೀವನಕ್ಕೆ ಪೂರಕವಾಗಿವೆ.

ಅಲ್ಲಲ್ಲಿ ಸಣ್ಣ - ಪುಟ್ಟ ಉದ್ಯಾನವನಗಳಿದ್ದು, ಬೆಂಗಳೂರಿನ 'ಉದ್ಯಾನನಗರಿ' ಬಿರುದನ್ನು ಮೈಸೂರು ತನ್ನದಾಗಿಸುಕೊಳ್ಳುವಲ್ಲಿ ಮುಂಚೂಣಿಯಲ್ಲಿದೆ. ಕುಕ್ಕರಹಳ್ಳಿ ಕೆರೆ, ಕಾರಂಜಿ ಕೆರೆ ಹಾಗೂ ಲಿಂಗಾಂಬುದಿ ಕೆರೆಗಳು ಮೈಸೂರಿನ ಪ್ರಾಕೃತಿಕ ಸೊಬಗನ್ನು ಹೆಚ್ಚಿಸಲು ನೆರವಾಗಿವೆ. ಈ ಎಲ್ಲ ಕೆರೆಗಳೂ ಅನೇಕಾನೇಕ ಪಕ್ಷಿ ಸಂಕುಲಗಳ ತವರಾಗಿವೆ. ಅತಿ ಅಪರೂಪದ ಪಕ್ಷಿಗಳನ್ನು ಈ ತಾಣಗಳಲ್ಲಿ ನಾವು ಕಾಣಬಹುದು. ವಿಶ್ವದ ಎಲ್ಲೆಡೆಯಿಂದ ಪಕ್ಷಿಗಳು ಇಲ್ಲಿಗೆ ವಲಸೆ ಬಂದಿರುವುದನ್ನು ನೋಡಬಹುದು. ಮೈಸೂರಿನ ಹೊರವಲಯದಲ್ಲಿರುವ ಲಿಂಗಾಂಬುದಿ ಅತಿ ಹೆಚ್ಚು ಪಕ್ಷಿಗಳನ್ನು ಆಕರ್ಷಿಸುವ, 217 ಎಕರೆ ವಿಸ್ತಾರದ ಪಕ್ಷಿಧಾಮ ಹಾಗು ರಕ್ಷಿತಾರಣ್ಯ. ಈ ಕೆರೆಯು 1828ರಲ್ಲಿ ರಾಣಿ ಲಿಂಗಾಜಮ್ಮಣ್ಣಿಯವರಿಂದ ನಿರ್ಮಾಣವಾಯಿತೆಂದು ದಾಖಲೆಯಿದೆ. ನಗರದಿಂದ ಸಾಕಷ್ಟು ದೂರದಲ್ಲಿದ್ದ ಈ ಕೆರೆಗೆ ಬಹಳ ವಿಸ್ತಾರವಾದ ಜಲಾನಯನ ಪ್ರದೇಶವಿದ್ದು ನೀರಿನ ಪೂರೈಕೆ ಚೆನ್ನಾಗಿ ಆಗುತ್ತಿತ್ತೆನ್ನುವ ಮಾತಿದೆ. ವಿಸ್ತಾರವಾದ ಈ ಕೆರೆಯಿಂದ ಸುತ್ತ-ಮುತ್ತಲಿನ ಗ್ರಾಮಗಳ ಕುಡಿಯುವ ನೀರಿನ ಪೂರೈಕೆ, ದನ ಕರುಗಳ ನೀರಿನ ಅವಶ್ಯಕತೆ, ವ್ಯವಸಾಯದ ನೀರಿನ ಅವಶ್ಯಕತೆ, ಮೀನುಗಾರಿಕೆ, ಗ್ರಾಮವಾಸಿಗಳ ಸ್ವಚ್ಚತೆ, ಮುಂತಾದ ಅನೇಕ ಅವಶ್ಯಕತೆಗಳ ಪೂರೈಕೆ ಸುಸೂತ್ರವಾಗಿ ನೆರವೇರುತ್ತಿತ್ತು. ಈಗ ನಗರದ ವಿಸ್ತೀರ್ಣ ಕಾರಣವಾಗಿ ಕೆರೆಯ ಸುತ್ತ ಮುತ್ತಲೆಲ್ಲ ಮನೆಗಳಾಗಿ, ಕೆರೆಗೆ ನೀರಿನ ಒರತೆ ಇಲ್ಲದೆ ಜಲ ವಿಸ್ತಾರ ಬಹಳ ಕಡಿಮೆಯಾಗಿದೆ. ಭೇಟಿ ಕೊಡುವ ಪಕ್ಷಿ ಸಂಕುಲವೂ ಕಡಿಮೆಯಾಗಿದೆ.

ಅರಣ್ಯ ಇಲಾಖೆಯ ಮನವಿಯ ಮೇರೆಗೆ 2003ರಲ್ಲಿ ಈ ಪ್ರದೇಶವನ್ನು ರಕ್ಷಿತಾರಣ್ಯವಾಗಿ ಘೋಷಿಸಲಾಗಿದೆ. ಅಂದಿನಿಂದ ಸಂರಕ್ಷಣೆಯ ಕಾರ್ಯ ಎಡೆಬಿಡದೆ ಸಾಗಿ, ಪೂರಕವಾಗಿ ಅರಣ್ಯ ಬೆಳೆಸುವ ಕ್ರಿಯೆ ಪ್ರಾರಂಭವಾಗಿದೆ. ಕಳೆದ ವರ್ಷ ಕೆರೆಯಲ್ಲಿ ಸಾಕಷ್ಟು ಜಲ ಸಂಗ್ರಹವಾಗಿತ್ತು. ಈ ವರ್ಷ ಇದುವರೆಗೂ ನೀರು ಬಂದಿಲ್ಲ. ಬರದ ಕಾರಣ ಗಿಡ, ಮರಗಳೆಲ್ಲ ಒಣಗಿದ್ದು, ಇತ್ತೀಚಿನ ಸ್ವಲ್ಪ ಮಳೆಯಿಂದ ಚೇತರಿಸಿಕೊಂಡಿವೆ. ಅರಣ್ಯ ಇಲಾಖೆ ಪಕ್ಷಿಗಳ ಸಂರಕ್ಷಣೆಗಾಗಿ ಬಿದಿರಿನ ಮೆಳೆಯನ್ನು ಹೆಚ್ಚಾಗಿ ಬೆಳೆಸಿದೆ. ಬೇರೆ ಜಾತಿಯ ಮರ ಗಿಡಗಳೂ ಸಾಕಷ್ಟು ಸಂಖ್ಯೆಯಲ್ಲಿವೆ. ಸಾರ್ವಜನಿಕರಿಗೆ ಇಲ್ಲಿ ವಾಯು ವಿಹಾರದ ಸುಖಾನುಭವಕ್ಕೆ ಆಸ್ಪದ ಮಾಡಿಕೊಡಲಾಗಿದೆ. ಈ ಉದ್ಯಾನದಲ್ಲಿ ಒಂದು ಸುತ್ತು ಕ್ರಮಿಸಿದರೆ 1.5 ಕಿ.ಮೀ ಆಗುತ್ತದೆ.

ಈ ಕೆರೆಯ ಅಂಚಿನಲ್ಲೇ ಶ್ರೀ ಮಹಾಲಿಂಗೇಶ್ವರ ದೇವಾಲಯವಿದೆ. ಅತಿ ಪ್ರಾಚೀನವಾದ ಈ ದೇವಾಲಯಕ್ಕೆ ಇಲ್ಲಿನ ರಾಜರು ಬಹಳ ಭಯ - ಭಕ್ತಿಯಿಂದ ನಡೆದುಕೊಳ್ಳುತ್ತಿದ್ದರೆನ್ನುವುದಕ್ಕೆ ಸಾಕ್ಷಿಗಳಿವೆ. ನಿರಂತರ ಪೂಜಾಕಾರ್ಯಗಳಿಗೆ ದಾನ - ದತ್ತಿಗಳನ್ನು ಕೊಟ್ಟಿದ್ದರು. ದೇವಾಲಯದ ಪರಿಸರ ಸುಂದರವಾಗಿದ್ದು, ಚೊಕ್ಕಟವಾಗಿದೆ. ನಿತ್ಯ ಪೂಜಾ ಕಾರ್ಯ ನಡೆಯುತ್ತದೆ.

ಮೈಸೂರಿನ ಹೃದಯ ಭಾಗದಲ್ಲಿರುವ ಕುಕ್ಕರಹಳ್ಳಿ ಕೆರೆಯನ್ನು ಶ್ರೀ ಮುಮ್ಮಡಿ ಕೃಷ್ಣರಾಜ ವಡೆಯರ್ ಅವರು 1864ರಲ್ಲಿ ಕಟ್ಟಿಸಿದರೆಂಬ ದಾಖಲೆ ಇದೆ. ಸುಮಾರು 58 ಹೆಕ್ಟರ್ ವಿಸ್ತೀರ್ಣ (ಸುಮಾರು 150 ಎಕರೆ) 5 ಕಿ.ಮಿ. ದಡವನ್ನು ಹೊಂದಿರುವ ಈ ಕೆರೆ ಮಾನಸಗಂಗೋತ್ರಿ, ರಂಗಾಯಣ ಹಾಗು ಕೇಂದ್ರ ಆಹಾರ ಸಂಶೋದನಾಲಯದ ಮಧ್ಯದಲ್ಲಿದೆ. ಸುಮಾರು 10000 ಎಕರೆ ಕೃಷಿ ಭೂಮಿಗೆ ನೀರು ಒದಗಿಸುತ್ತಿದ್ದ ಹಾಗು ನಗರದ ದಾಹವನ್ನು ಬಹು ಮಟ್ಟಿಗೆ ತಣಿಸುತ್ತಿದ್ದ ಕೆರೆ ಈಗ ಭೂ ಕಬಳಿಕೆಯ ಪರಿಣಾಮವಾಗಿ ಮರಣದ ಅಂಚನ್ನು ತಲುಪಿದೆ. ಕೆರೆಯ ಒಡೆತನ ಈಗ ಮೈಸೂರು ವಿಶ್ವ ವಿದ್ಯಾಲಯಕ್ಕೆ ಸೇರಿದೆ. ಅವರು ಹಾಗು ನಾಗರಿಕ ವೇದಿಕೆ ಕೆರೆಯನ್ನು ಉಳಿಸಿಕೊಳ್ಳುವ ಹರ ಸಾಹಸ ಮಾಡುತ್ತಿದ್ದಾರೆ. ಒಂದು ಕಾಲದಲ್ಲಿ ಹತ್ತರಿಂದ ಹದಿನೈದು ಸಾವಿರದವರೆಗೆ ಪಕ್ಷಿಗಳು ಇಲ್ಲಿಗೆ ವಲಸೆ ಬರುತ್ತಿತ್ತೆನ್ನುವುದು ಪಕ್ಷಿ ವೀಕ್ಷಕರ ಅಭಿಪ್ರಾಯ. ಈಚೆಗೆ ಈ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ನೀರಿನ ಗುಣಮಟ್ಟ ಕಡಿಮೆಯಾಗಿರುವುದು, ಕೆರೆಯ ವತ್ತುವರಿಯಾಗಿರುವುದು ಮುಖ್ಯ ಕಾರಣವೆನ್ನಲಾಗುತ್ತಿದೆ. ಏಷ್ಯನ್ ಡೆವೆಲಪ್ಮೆಂಟ್ ಬ್ಯಾಂಕಿನ ಆರ್ಥಿಕ ನೆರೆವಿನಿಂದ ಸುಮಾರು 6-7 ವರುಷಗಳ ಹಿಂದೆ ಕೈಗೊಂಡ ಪುನರುಜ್ಜೀವನ ಕೆಲಸಗಳಿಂದ ಈಗ ಕೆರೆಯ ನೋಟ ಸುಂದರವಾಗಿದೆ. ಪಕ್ಷಿಗಳನ್ನು ನಿಧಾನವಾಗಿ ಆಕರ್ಷಿಸುತ್ತಿದೆ.

ಮೈಸೂರು ಪ್ರಾಣಿ ಸಂಗ್ರಹಾಲಯದ ಒಡೆತನದ ಕಾರಂಜಿ ಕೆರೆ ಪ್ರಾಕೃತಿಕ ಸೊಬಗನ್ನೊಳಗೊಂಡ ಸುಮಾರು 120 ಎಕರೆ ವಿಸ್ತೀರ್ಣವುಳ್ಳ, ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ತಾಣ. ಒಂದು ಕಾಲದಲ್ಲಿ ವಲಸೆ ಹಕ್ಕಿಗಳ ಬೀಡಾಗಿದ್ದ ಈ ಕೆರೆ, ಮನು ಕುಲದ ಬೇಜವಾಬ್ದಾರಿಯಿಂದ ಪಕ್ಷಿಗಳ ತಿರಸ್ಕಾರಕ್ಕೆ ತುತ್ತಾಗಿದೆ! ಏಷ್ಯನ್ ಡೆವೆಲಪ್ಮೆಂಟ್ ಬ್ಯಾಂಕಿನ ಆರ್ಥಿಕ ನೆರವಿನಿಂದ ಕೈಗೊಂಡ ಅಭಿವೃದ್ದಿ ಕಾರ್ಯಗಳಿಂದ ಪರಿಸ್ಥಿತಿ ಸುಧಾರಿಸುತ್ತಿದೆ.

ಮನುಜ ಕುಲದ ದುರಾಸೆ, ಬೇಜವಾಬ್ದಾರಿತನ ನಮ್ಮನ್ನು ಇಂತಹ ಸುಂದರ ತಾಣಗಳಿಂದ ವಂಚಿಸುವುದರಲ್ಲಿ ಸಂಶಯವಿಲ್ಲ. ಈಗಲಾದರೂ ನಾವು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಜನಾಂಗ ನಮ್ಮನ್ನು ಶಪಿಸಬಹುದು.

Sunday 8 July 2012

Retirement Blues

After my retirement from service, I rescheduled my routine to spend the time as I like. There were no targets to be reached, budget to be achieved, customer to be wooed, boss to be satisfied and subordinates to be cajoled. I thought for a while that I am the boss and nobody can beat me. But believe me, I was wrong. I had a super boss whom I had not noticed. Yes! You guessed it correctly. My wife! She ordered me to get up early in the morning to go for a walk to keep my tummy in shape. Thus my dream of early morning sleep was shattered. With much reluctance and resistance I started walking.


While returning home I am not supposed to come empty handed. Milk booth will be open by that time and fresh milk is very good for tasty coffee. Fresh vegetables are available road side and they are good for health. You can't ignore the advice. Gradually this duty and responsibility was thrust on me.

Reading news papers in detail was not possible while in service. I used to glance head lines and finish reading. I enjoy reading news papers thoroughly. My habit is to read before bath and I will be dreaming about one more dose of coffee before going to bath. There comes a reprimand. It is already getting late. Why can't you go to bath? No coffee, nothing else unless you finish your bath. No second dose of coffee before breakfast!

These days it is very difficult to travel in auto-rickshaws. You can't afford to travel by auto particularly after retirement. Hence, I took up the role of driver whenever my wife wanted to go out for shopping, visits etc. Anyway, I had lot of time at my disposal and this new job helped me in spending time. Without this what will I do sitting idle at home?

I had missed a lot of marriages, upanayanams, chowlas, other religious and non religious functions held at our relatives’ families during my service at the bank. Now there is no excuse. I have made it a point to attend all the functions wherever I am invited. I have already added 12 kilos to my over weighing body. I am hopeful of adding 10 more kilos during this season!

I thought, I can watch the channel of my choice on the TV and spend some time. But where is the remote? It is always either with my wife or father. I had to be content watching a lot of ads and I am finding them to be more interesting than the main serial.

As I am at home, I have to voluntarily take to daily chores on occasions. You can't close your eyes and escape. I am inclined to believe that such occasions are slowly increasing and I am enjoying the new responsibility.

Some of my friends suggested me to take up online trading activity, from which, you can earn a lot and spend a good time. Some how this idea never went into my mind and I am not able to understand the intricacies of trading. It is very difficult for me to understand the economics.

Some of my friends are re-employed and earning salary equivalent to their pre-retirement salary in addition to their pension. As I am lazy by nature, seeking re-employment is also not capturing my attention.

As my super boss has entrusted me some work, I will stop at this and come back to you through my next blog.

Image Courtesy: http://www.veryfunnypics.com

Tuesday 3 July 2012

ಮೊಬೈಲ್ ಕಿರಿ-ಕಿರಿ

ನಮ್ಮ ಜನಗಳ ಬೇಜವಾಬ್ದಾರಿಯೋ, ಹುಂಬತನವೋ ಅಥವಾ ಪ್ರತಿಷ್ಠೆಯ ಪ್ರದರ್ಶನವೋ ಗೊತ್ತಾಗುತ್ತಿಲ್ಲ. ಮೊಬೈಲ್ ಇಲ್ಲದೆ ಬದುಕೇ ಇಲ್ಲವೇನೋ ಎನ್ನುವಷ್ಟರ ಮಟ್ಟಿಗೆ ಅದರ ಮೇಲೆ ಅವಲಂಬಿತರಾಗಿದ್ದೇವೆ ಎನಿಸುತ್ತಿದೆ. ದ್ವಿಚಕ್ರ ವಾಹನ ಸವಾರಿ ಮಾಡುವಾಗಲೂ ಮೊಬೈಲಿನಲ್ಲಿ ಮಾತಾಡುತ್ತಲೇ ಚಲಿಸುವಷ್ಟು ಬ್ಯುಸಿ. ವಾಹನದಲ್ಲಿ ಹೆಂಡತಿ, ಮಗು/ಮಕ್ಕಳು ಕುಳಿತಿದ್ದರೂ ನಮಗೆ ಅದರ ಪರವಾಹ ಇಲ್ಲ. ಕತ್ತನ್ನು ಒಂದು ಕಡೆಗೆ ಓಲಿಸಿಕೊಂಡು ಒಂದು ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಮತ್ತೊಂದು ಕೈಯಲ್ಲಿ ವಾಹನದ ಹ್ಯಾಂಡಲ್ ಹಿಡಿದು ವಾಹನ ಓಡಿಸುವ ಪರಿ ನಮ್ಮ ದೇಶದಲ್ಲಿ ಮಾತ್ರ ಕಾಣಲು ಸಾಧ್ಯ!

ಯಾವುದೇ ವಾಹನ ನಡೆಸುವಾಗ ಮೊಬೈಲ್ ಸಂಭಾಷಣೆ ಎಲ್ಲ ದೇಶಗಳಲ್ಲಿದ್ದಂತೆ ನಮ್ಮಲ್ಲೂ ನಿಷಿದ್ದ. ಕಾನೂನು ಮಾಡುವವರಿಗೆ ನಾವೆಷ್ಟು ಬ್ಯುಸಿ ಎಂದು ಏನು ಗೊತ್ತು? ಕಾನೂನನ್ನು ಪಾಲಿಸಬೇಕೆಂದು ಎಲ್ಲಿದೆ ನಿಯಮ. ಮೊಬೈಲ್ ಸಂಭಾಷಣೆಯೊಂದಿಗೆ ವಾಹನ ಚಲಿಸುವ ಗಮ್ಮತ್ತು ಇವರ್ಯಾರಿಗೆ ಗೊತ್ತು? ವಾಹನದಲ್ಲಿ ಚಲಿಸುವಾಗ ಕರೆ ಬಂದರೆ ಪಕ್ಕದಲ್ಲಿ ವಾಹನ ನಿಲ್ಲಿಸಿ ಕರೆ ಸ್ವೀಕರಿಸುವ ಪುರುಸೊತ್ತು ಯಾರಿಗಿದೆ? ಕರೆ ಬಂದದ್ದು ಫೋನಿನಲ್ಲಿ ನಮೂದಾಗಿದ್ದರೂ ಮತ್ತೆ ನಾವು ಕರೆ ಮಾಡುವವರೆಗೆ ಕಾಯುವ ತಾಳ್ಮೆ ಕರೆ ಮಾಡಿದವರಿಗೆ ಇರುತ್ತದೆಯೇ? ಹಾಗಾಗಿ ಚಲಿಸುವಾಗಲೇ ಮಾತನಾಡುವ ಅಭ್ಯಾಸ ನಮಗಾಗಿದೆ. ಎಲ್ಲರೂ ಹೀಗೆ ಮಾಡುತ್ತಿರುವುದರಿಂದ ನಾವು ಮಾಡುವುದು ತಪ್ಪು ಅಥವಾ ಅಪರಾಧ ಎಂದು ಎನಿಸುವುದೇ ಇಲ್ಲ! ನನ್ನಂಥ ನಾಲ್ಕಾರು ತಲೆ ಕೆಟ್ಟವರಿಗೆ ಇದನ್ನು ಕಂಡಾಗ ಕೋಪ ಬರಬಹುದು. ಇದರಿಂದೇನು? ನಾವು ಮಾತಾಡುತ್ತಲೇ ಇರುತ್ತೇವೆ. ಎಲ್ಲ ಮೊಬೈಲ್ ಕಂಪನಿಗಳೂ ಹೆಚ್ಹು ಹೆಚ್ಚು ಮಾತಾಡಿ ಎಂದು ಹುರಿದುಂಬಿಸುತ್ತಿಲ್ಲವೇ ನಾವು ಅವರ ಮಾತು ಕೇಳದೆ ಅವರಿಗೆ ಬೇಜಾರು ಮಾಡುವುದು ನ್ಯಾಯವೇ?

ಮೊನ್ನೆ ನಾನು ರಸ್ತೆಯಲ್ಲಿ ನಡೆದು ಹೋಗುವಾಗ ಕುತೂಹಲಕ್ಕಾಗಿ ನನ್ನ ಎದಿರು ಬದಿಯಿಂದ ಬಂದ ದ್ವಿಚಕ್ರ ವಾಹನಗಳಲ್ಲಿ ಮೊಬೈಲ್ ಸಂಭಾಷಣೆ ಮಾಡುತ್ತ ವಾಹನ ನಡೆಸುತ್ತಿದ್ದವರ ಎಣಿಕೆ ಮಾಡಿದೆ. ನಾನು ಸುಮಾರು 3 ಕಿ.ಮೀ (one-way) ಕ್ರಮಿಸಿದೆ. ದಯಮಾಡಿ ನನ್ನನ್ನು ನಂಬಿ. ಎದುರಿನಿಂದ ಬಂದ 180 ದ್ವಿಚಕ್ರ ವಾಹನಗಳಲ್ಲಿ 164 ಸವಾರರು ಮೊಬೈಲ್ ಸಂವಾದದಲ್ಲಿ ತೊಡಗಿದ್ದರು! ದ್ವಿಚಕ್ರ ವಾಹನವಲ್ಲದೆ ಬೇರೆ ವಾಹನಗಳಲ್ಲು ಮೊಬೈಲ್ ಸಂಭಾಷಣೆಯ ಚಾಲಕರಿದ್ದರು. ನಾನು ದ್ವಿಚಕ್ರ ಚಾಲಕರನ್ನು ಗಮನಿಸುತ್ತಿದ್ದುದರಿಂದ ಬೇರೆ ವಾಹನಗಳ ಲೆಕ್ಕ ಮಾಡಲಾಗಲಿಲ್ಲ.

ಮೈಸೂರಿನಿಂದ ಬೆಂಗಳೂರಿಗೆ ಹೋಗುವಾಗ ನೂರಾರು ದ್ವಿಚಕ್ರ ವಾಹನ ಚಾಲಕರು ಮೊಬೈಲಿನಲ್ಲಿ ಸಂಭಾಷಿಸುತ್ತಲೇ ತೆರಳುವುದನ್ನು ನಾವೆಲ್ಲರೂ ಗಮನಿಸಿದ್ದೇವೆ. ಅವರಿಗೆ ಹೈ-ವೇನಲ್ಲಿ ಚಲಿಸುತ್ತಿದ್ದೇವೆಂಬ ಪರಿಜ್ಞಾನವೇ ಇರುವುದಿಲ್ಲ.

ಕಳೆದ ವಾರ ಆರ್.ಟಿ.ಓ ಕಚೇರಿಗೆ ಹೋಗಿದ್ದೆ. ಅಲ್ಲಿನ ವಿಚಾರಣೆಯ ಕೌಂಟರಿನಲ್ಲಿ ಕುಳಿತಿದ್ದ ಅಧಿಕಾರಿಯನ್ನು ಮಾತನಾಡಿಸಲು ನನಗೆ 12 ನಿಮಿಷ ಬೇಕಾಯಿತು. ಆ ಅಧಿಕಾರಿ ಮೊಬೈಲ್ ಸಂವಾದದಲ್ಲಿ ಬ್ಯುಸಿ ಆಗಿದ್ದರು ಎಂದು ಹೇಳುವ ಅವಶ್ಯಕತೆ ಇಲ್ಲ . ಇದು ಎಲ್ಲ ಸರಕಾರೀ ಕಛೇರಿಗಳ ದುಃಸ್ಥಿತಿ. ಸಂದರ್ಶಕರನ್ನು ಕೇಳುವವರೇ ಇಲ್ಲ. ಆದರೂ ಒಂದು ಸಮಾಧಾನ. ಸರಕಾರೀ ಫೋನುಗಳ ದುರ್ಬಳಕೆ ಕಡಿಮೆಯಾಗಿರಬಹುದೆಂದು!

ಮೊಬೈಲ್ ಸಂಭಾಷಣೆಯಲ್ಲಿ ಮೆಲು ಧ್ವನಿಯಲ್ಲಿ ಮಾತನಾಡಿದರೆ ಆ ಬದಿಯವರಿಗೆ ಕೇಳುವುದಿಲ್ಲವೆಂಬ ಸಂದೇಹ ನಮಗೆ. ಹಾಗಾಗಿ ಜೋರು ಧ್ವನಿಯಲ್ಲೇ ಮಾತನಾಡುವ ರೂಡಿ ನಮಗಾಗಿದೆ. ಇದರಿಂದ ಬೇರೆಯವರಿಗೆ ಮುಜುಗರವಾದರೆ ನಮಗೇನು? ನಮ್ಮ ಸಂಗತಿ ಇತರರಿಗೆ ಗೊತ್ತಾದರೆ ಏನಂತೆ? ನಾವಂತೂ ಮಾತನಾಡುವವರೇ. ರಾತ್ರಿಯ ಸ್ಲೀಪರ್ ರೈಲಿನಲ್ಲೂ ಗಂಟೆಗಟ್ಟಲೆ ಗಟ್ಟಿ ಧ್ವನಿಯಲ್ಲಿ ಮಾತನಾಡುವ ಗಟ್ಟಿಗರು ನಾವು! ಬೆಳಗಿನ ವೇಳೆ ವಾಕ್ ಮಾಡುವಾಗ ಪಾರ್ಕಿನಲ್ಲೂ ನಮಗೆ ಮೊಬೈಲಿನಲ್ಲಿ ಗಟ್ಟಿ ದ್ವನಿಯಲ್ಲಿ ಮಾತನಾಡುವ ಹವ್ಯಾಸ.

ಈಗಂತೂ ನೂರಾರು ಕಂಪನಿಗಳಿಂದ ಬಗೆ-ಬಗೆಯ ಹ್ಯಾಂಡ್ ಸೆಟ್ಟುಗಳು ಬಂದಿವೆ. ಇವು ನಮ್ಮಪ್ರತಿಷ್ಠೆಯ ಪ್ರತೀಕವೂ ಹೌದು. ಹ್ಯಾಂಡ್ ಸೆಟ್ಟಿನಿಂದ  ವ್ಯಕ್ತಿಯ ಯೋಗ್ಯತೆ ಅಳೆಯಬಹುದೆನ್ನುವ ತೀರ್ಮಾನಕ್ಕೆ ಬಂದಿದ್ದೇವೆ. ಹಿಂದೆಲ್ಲ ಒಂದೊಂದು ಮೊಬೈಲ್ ಇಟ್ಟುಕೊಳ್ಳುವುದೇ ದುಸ್ತರವಾಗಿತ್ತು. ಈಗ ಕನಿಷ್ಠ ಎರಡು ಹೊಂದಿರುವುದು ಸಾಮಾನ್ಯವಾಗಿದೆ.

ಮೊಬೈಲಿನಿಂದ ಪೇಚಿಗೆ ಸಿಲುಕಿರುವ ಪ್ರಸಂಗಗಳು ಬಹಳಷ್ಟಿವೆ. ಹಾಗೆಯೇ ಅದರಿಂದ ಬಚಾವಾದ ಸಂಗತಿಗಳು ಸಾಕಷ್ಟಿವೆ. ಮೊನ್ನೆ ನಾನು ಮೈಸೂರಿನಿಂದ ಬೆಂಗಳೂರಿಗೆ ಪ್ರಯಾಣ ಮಾಡುತ್ತಿದ್ದಾಗ ನನ್ನ ಪಕ್ಕದಲ್ಲಿದ್ದ ಪ್ರಯಾಣಿಕ ಅವರ ಬಾಸಿಗೆ ನಾವು ಮಂಡ್ಯದಲ್ಲಿದ್ದಾಗ, ಬೆಂಗಳೂರಿನ ಮಜೆಸ್ಟಿಕ್-ನಲ್ಲಿರುವುದಾಗಿಯೂ, ಅಲ್ಲಿಂದ ನೇರವಾಗಿ ಅವರ ಗ್ರಾಹಕರನ್ನು ಭೇಟಿಮಾಡಿ ಕಛೇರಿಗೆ ಬರುವುದಾಗಿ ತಿಳಿಸುತ್ತಿದ್ದ. ನಮ್ಮ ಬ್ಯಾಂಕಿನಲ್ಲಿ ಕಂಪ್ಯೂಟರ್ ಬಳಕೆ ಪ್ರಾರಂಭವಾದ ಹೊಸತರಲ್ಲಿ ಕೆಲವು ಅಧಿಕಾರಿಗಳಿಗೆ ವಿಶೇಷ ತರಬೇತಿ ಕೊಟ್ಟು ಅವರಿಗೆ ಮೊಬೈಲ್ ಹ್ಯಾಂಡ್ ಸೆಟ್ ಕೊಡಿಸಿದ್ದರು, ಶಾಖೆಗಳವರು ತೊಂದರೆಯಾದಾಗ ಸಂಪರ್ಕಿಸಲೆಂದು. ನಮ್ಮ ಯಾವ ತುರ್ತು ಸಮಯದಲ್ಲೂ ಆ ಯಾವ ನಂಬರ್ರು ಸಿಗುತ್ತಲೇ ಇರಲಿಲ್ಲ!

ನನ್ನ ಸಹೋದ್ಯೋಗಿಯೊಬ್ಬರು ಪ್ರೀಮಿಯರ್ ಸ್ಟುಡಿಯೋ ಹತ್ತಿರ ಮೊಬೈಲಿನಲ್ಲಿ ಮಾತನಾಡುತ್ತ ರಸ್ತೆ ದಾಟುವಾಗ ಬಸ್ ಒಂದು ಅಪ್ಪಳಿಸಿ ರಸ್ತೆಯಲ್ಲೇ ಅವರು ಕೊನೆ ಉಸಿರು ಎಳೆದದ್ದು ವಿಷಾದದ ಸಂಗತಿ.

ಇಷ್ಟೆಲ್ಲಾ ಹೇಳಿದಮೇಲೆ, ಮೊಬೈಲ್ ಫೋನ್ ಬಗ್ಗೆ ನನಗೆ ತಿರಸ್ಕಾರ ಇದೆ ಎಂದು ತಿಳಿಯಬೇಡಿ! ಅದರ ಅನೇಕ ಸದುಪಯೋಗಗಳು ನನಗೆ ತಿಳಿದಿದೆ. ಆಪತ್ಬಾಂದವ, ಅನಾಥ ರಕ್ಷಕನೆನ್ನುವುದು ಗೊತ್ತಿದೆ. ನನ್ನ ಕಳವಳ ಅದರ ದುರುಪಯೋಗದ (abuse) ಬಗ್ಗೆ ಮಾತ್ರ.

ಸಧ್ಯ ನನ್ನ ಮೊಬೈಲ್ ರಿಂಗ್ ಆಗುತ್ತಿದೆ. ಕರೆ ಸ್ವೀಕರಿಸಿ ಮುಂದಿನ ಬ್ಲಾಗ್ ನಲ್ಲಿ ಭೇಟಿಯಾಗುತ್ತೇನೆ. ನಮಸ್ಕಾರ.

Thursday 24 May 2012

ಪ್ರವಾಸವೋ-ಪ್ರಯಾಸವೋ

ಒಂದು ಕಡೆ ಹಗರಣಗಳ ಪರ ನಿಂತಿರುವ ರಾಜಕಾರಣಿಗಳು, ಮತ್ತೊಂದೆಡೆ ಅವರ ವಿರುದ್ದ ಹೋರಾಡುತ್ತಿರುವ ನಾಗರಿಕರು, ನಡುವೆ ಏನಾದರೆ ನಮಗೇನು ಎಂದು ಬದುಕುತ್ತಿರುವ ಶ್ರೀಸಾಮಾನ್ಯರು, ಇಂಥಹ ದಯನೀಯ ಸ್ಥಿತಿಯಲ್ಲಿ ಸಿಕ್ಕಿದಷ್ಟು ದೋಚುವ ವ್ಯಾಪಾರಿಗಳು, ಅಧಿಕಾರಿಗಳು, ಗುತ್ತಿಗೆದಾರರುಗಳನ್ನು ನೋಡಿದಾಗ ನಮ್ಮ ಭವಿಷ್ಯದ ಬಗ್ಗೆ ಬಹಳ ಗಾಬರಿ ಮೂಡುವುದು ಸಹಜ. 

ಚಾಮುಂಡಿ ಬೆಟ್ಟ 
ಮೈಸೂರು ಪ್ರಸಿದ್ದ ಪ್ರವಾಸಿ ತಾಣ. ದೋಚುವುದು, ವಂಚಿಸುವುದು, ಮುಂತಾದ ಅಕ್ರಮ ಚಟುವಟಿಕೆಗಳಿಗೆ ಮೈಸೂರಿಗಿಂತ ಪ್ರಶಸ್ತ ಸ್ಥಳ ಮತ್ತೆಲ್ಲಿ ಸಿಕ್ಕೀತು? ಚಾಮುಂಡಿಬೆಟ್ಟ, ಕೃಷ್ಣರಾಜಸಾಗರ, ಶ್ರೀರಂಗಪಟ್ಟಣ ಮುಂತಾದೆಡೆಗೆ ಯಾವಾಗಲೂ ಪ್ರವಾಸಿಗಳ ನೂಕುನುಗ್ಗಲೇ ಸರಿ. ಇಂತಹ ತಾಣಗಳಲ್ಲಿ ಪ್ರವಾಸಿಗರ ಅವಶ್ಯಕತೆಗಳೂ ಬಹಳಷ್ಟಿರುತ್ತವೆ. ಅವುಗಳನ್ನು ಪೂರೈಸಿ ಹಣ ದೋಚುವ ವ್ಯಾಪಾರಿಗಳೂ ಬಹಳಷ್ಟಿದ್ದಾರೆ. ದೋಚುವ ವ್ಯಾಪಾರಿಗಳಿಗೆ ಕಡಿವಾಣ ಹಾಕಬೇಕಾದ ಅಧಿಕಾರಿಗಳು ಕಣ್ಮುಚ್ಚಿ ತೆಪ್ಪಗಿದ್ದಾರೆ.

ಇತ್ತೀಚಿಗೆ, ನನ್ನ ಮೊಮ್ಮಕ್ಕಳೊಂದಿಗೆ ಕೆ.ಆರ್.ಎಸ್- ಚಾಮುಂಡಿ ಬೆಟ್ಟಕ್ಕೆ ಹೋಗುವ ಸಂದರ್ಭ ಬಂದಿತ್ತು. ಖುಷಿಯಿಂದ ನಾವೆಲ್ಲರೂ ಹೊರಟೆವು. ಮೈಸೂರಿನ ರಸ್ತೆಗಳು ಚೆನ್ನಾಗಿರುವುದರಿಂದ ಪ್ರಯಾಣವೇನೋ ಸುಖಕರವಾಗಿತ್ತು. ಬೆಟ್ಟದಮೇಲೆ, ನನ್ನ ಮೊಮ್ಮಗ, ಸಾಫ್ಟ್ ಡ್ರಿಂಕ್ (ಮಾಜ) ಬೇಕೆಂದ. ಅವನೊಂದಿಗೆ ನಾವೆಲ್ಲರೂ ಅದನ್ನು ಖರೀದಿಸಿ ಕುಡಿದೆವು. ಹಣ ಕೊಡುವಾಗ ದೊಡ್ಡ ಶಾಕ್ ನನಗೆ ಕಾದಿತ್ತು. ಪ್ರತಿ ಬಾಟಲ್ ಬೆಲೆ ಎಂ.ಆರ್.ಪಿ ಪ್ರಕಾರ ರೂ 12/- ಇತ್ತು. ಆದರೆ ಅಂಗಡಿಯವನು ರೂ 15/- ಸುಲಿಗೆ ಮಾಡಿದ. ಹೆಚ್ಚು ರೊಕ್ಕ ಏತಕ್ಕಾಗಿ ಎನ್ನುವುದಕ್ಕೆ ಅವನಲ್ಲಿ ಉತ್ತರವಿರಲಿಲ್ಲ. ಬೇರೆ ಪ್ರವಾಸಿಗಳಿಗೆ ಈ ಅನ್ಯಾಯದ ಕಡೆ ಗಮನ ಹರಿಸುವಷ್ಟು ಪುರುಸೊತ್ತು ಇರಲಿಲ್ಲ. ಮಕ್ಕಳು ಕೇಳಿದಾಗ ಇಲ್ಲವೆನ್ನುವ ಸ್ವಭಾವ ಯಾರಲ್ಲೂ ಇರುವುದಿಲ್ಲ. ಅಲ್ಲಿ ಒಂದು ಸೀನ್ ಕ್ರಿಯೇಟ್ ಮಾಡಲು ಇಷ್ಟವಿಲ್ಲದೆ ಅವನು ಕೇಳಿದಷ್ಟು ಹಣ ತೆತ್ತು ಅಲ್ಲಿಂದ ಹೊರಡಬೇಕಾಯಿತು. ಅಲ್ಲಿ ಬೇರೆ ಅಂಗಡಿಗಳಲ್ಲಿ ವಿಚಾರಿಸಿದಾಗ ಎಲ್ಲ ಅಂಗಡಿಗಳಲ್ಲೂ ರೂ 12/- ರ  ಪೇಯ  ರೂ 15/- ಕ್ಕೆ ಮಾರಾಟವಾಗುತ್ತಿರುವ ವಿಷಯ ತಿಳಿಯಿತು.

ಬೃಂದಾವನ, ಕೆ.ಆರ್.ಎಸ್ 
ಮರುದಿನದ ಕೆ.ಆರ್.ಎಸ್ ಭೇಟಿಯೂ ಇಂತಹದೆ ಕಹಿ ಅನುಭವವನ್ನು ನೀಡಿತು. ವಿಚಿತ್ರವೆಂದರೆ, ಇಲ್ಲಿ ಅಂಗಡಿಗಳ ಮೇಲೆಲ್ಲಾ ಕೆ.ಎಸ್.ಟೀ.ಡಿ.ಸೀ ಶಾಪ್ ಎಂಬ ಫಲಕ ಬೇರೆ! ಧರೆಯೇ ಹತ್ತಿ ಉರಿಯುತ್ತಿರುವಾಗ ಓಡುವುದೆಲ್ಲಿಗೆ?

ಈ ಎರಡೂ ಕಡೆ ಬೇರೆ ತಿಂಡಿ-ತಿನಿಸುಗಳೂ ಕೂಡ ಎಂ.ಆರ್.ಪಿಗಿಂತ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿರುವ ವಿಷಯ ನನ್ನ ಗಮನಕ್ಕೆ ಬಂತು. 

ಸರಾಸರಿ ದಿನಕ್ಕೆ 60000 ಜನ ಈ ಸ್ಥಳಗಳಿಗೆ ಭೇಟಿ ಕೊಡುತ್ತಾರೆಂದುಕೊಂಡರೆ  (ವಿಶೇಷ  ದಿನಗಳಲ್ಲಿ ಸಂಖ್ಯೆ 2,00,000 ದಾಟಿದ್ದಿದೆ), ಅವರಲ್ಲಿ 30000 ಜನ ಇಂಥ ಖರೀದಿ ಮಾಡಿದರೆ ಒಂದು ಸಾಮಗ್ರಿಯಿಂದ 90000 ಸುಲಿಗೆ. ಪ್ರವಾಸಿಗಳು ಸಾಮಾನ್ಯವಾಗಿ ಇಂತಾ ಲೆಕ್ಕಾಚಾರ ಹಾಕುತ್ತ ಖರೀದಿಸುವುದನ್ನು ಬಿಡುವುದಿಲ್ಲ. ತಿಂಡಿ-ತಿನಿಸುಗಳ ಖರೀದಿಯೂ ಭರ್ಜರಿಯಾಗೇ ನಡೆಯುತ್ತದೆ. ಹಾಗಾಗಿ ಈ ಯಾವುದೇ ಸ್ಥಳಗಳಲ್ಲೂ ಪ್ರತಿ ದಿನದ ಸುಲಿಗೆ ಕನಿಷ್ಠ ಮೂರರಿಂದ ನಾಲ್ಕು ಲಕ್ಷವೆಂದು ಸುಲಭವಾಗಿ ಲೆಕ್ಕ ಹಾಕಬಹುದು. ಇದು ಅವರ ಲಾಭವನ್ನು ಹೊರತುಪಡಿಸಿ.

ಸಂಬಂಧ ಪಟ್ಟ ಇಲಾಖೆಯ ಉದ್ಯೋಗಿಗಳಾರೂ ಈ ಯಾವುದೇ ಪ್ರವಾಸಕ್ಕೆ ಹೋಗಿಲ್ಲ, ಅಥವಾ ಹೋಗಿದ್ದರೂ ಇಂಥ ವಿಷಯ ಅವರ ಗಮನಕ್ಕೆ ಬಂದಿಲ್ಲ ಎಂದರೆ ನಂಬಲು ಸ್ವಲ್ಪ ಕಷ್ಟವಾಗುತ್ತೆ. ವಾಣಿಜ್ಯ ಇಲಾಖೆ, ತೂಕ ಮತ್ತು ಅಳತೆ ಇಲಾಖೆ, ಪ್ರವಾಸೋದ್ಯಮ ಇಲಾಖೆ ಇಂತಹ ಅನ್ಯಾಯಗಳ ನಿಯಂತ್ರಣ ಮಾಡಬೇಕಾದ ಜವಾಬ್ದಾರಿಯಿಂದ ಹೇಗೆ ನುಣಿಚಿಕೊಂಡಿವೆ? ಈ ಸುಲಿಗೆಯಲ್ಲಿ ಅವರ ಪಾಲೂ ಇಲ್ಲದೆ ಇದು ಸಾಧ್ಯವಿಲ್ಲವೆಂದೆನಿಸುತ್ತೆ.

ಪ್ರವಾಸಿಗರಿಗಾಗಿ ಎಷ್ಟೆಲ್ಲ ಸೌಲಭ್ಯ ಕಲ್ಪಿಸುತ್ತಿರುವ ಸರಕಾರ ಇಂತಹ ಸುಲಿಗೆ ತಪ್ಪಿಸದಿದ್ದರೆ, ಮಾಡಿದ್ದೆಲ್ಲ ವ್ಯರ್ಥ. ಪ್ರವಾಸದ ನೆನಪು ದೀರ್ಘ ಕಾಲ ಮನಸ್ಸಿನಲ್ಲಿ ಉಳಿಯುವಂಥದ್ದು. ಅನುಭವ ಮಧುರ, ಸುಖ, ಉಲ್ಲಾಸಕರವಾಗಿದ್ದರೆ ಮುಂದಿನ ಪ್ರವಾಸದ ತನಕ ಮನಸ್ಸಿನಲ್ಲಿ ಮೆಲುಕು ಹಾಕುತ್ತಿರುತ್ತೇವೆ. ಕಹಿ ಅನುಭವವಾದರೆ ಮತ್ತೆ ಪ್ರವಾಸ ಹೊರಡುವ ಮುನ್ನ ಇನ್ನೊಮ್ಮೆ ಯೋಚಿಸ ಬೇಕೆನಿಸುತ್ತೆ. ಪ್ರವಾಸೋದ್ಯಮ ಯಾವುದೇ ದೇಶದ/ರಾಜ್ಯದ ಆರ್ಥಿಕ ಬೆನ್ನೆಲುಬಾಗುವ ಎಲ್ಲ ಸಾಧ್ಯತೆಗಳನ್ನೂ ಒಳಗೊಂಡಿದೆ. ಪ್ರವಾಸೋದ್ಯಮವೇ ಮುಖ್ಯವಾಗಿರುವ ಯಾವುದೇ ವಿದೇಶದ ಪ್ರವಾಸದಲ್ಲೂ ನಾವು ಪ್ರವಾಸಿಗರನ್ನು ದೇವರಂತೆ ಕಾಣುವ ಸಂಪ್ರದಾಯವನ್ನು ನೋಡಿದ್ದೇವೆ. ಅಲ್ಲಿನ ಸರಕಾರಗಳು ಪ್ರವಾಸಿಗಳ ಅನುಕೂಲಕ್ಕೆ ಯಾವ ಮಟ್ಟಕ್ಕೆ ಹೋಗಲೂ ಸಿದ್ದವಾಗಿರುತ್ತವೆ.

ನಮ್ಮ ದೇಶದಲ್ಲಿ ಶ್ರೀ ಸಾಮಾನ್ಯ ನಾಗರೀಕ ಪ್ರಭುವಿಗೆ ಬೆಲೆ ಬರುವುದು ಯಾವಾಗಲೋ?

Photo courtesy: Google